ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಸಮೀಪದ ಸತ್ತಿಹಳ್ಳಿ ಗ್ರಾಮಕ್ಕೆ ಎರಡು ಕಾಡಾನೆಗಳು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದು, ಮನೆ ಅಂಗಳಕ್ಕೂ ನುಗ್ಗಿ ಕಾಂಪೌಂಡ್ ಹಾನಿಗೊಳಿಸಿವೆ. ಗ್ರಾಮದ ರಸ್ತೆಯಲ್ಲಿ ಎರಡು ಕಾಡಾನೆಗಳು ಸಂಚರಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸತ್ತಿಹಳ್ಳಿ ಗ್ರಾಮದ ಕೃಷ್ಣ ಎಂಬವರಿಗೆ ಸೇರಿದ ಕಾಫಿ ನರ್ಸರಿಯಲ್ಲಿ ಕಾಡಾನೆಗಳು ಸಂಚರಿಸಿ, ಗಿಡಗಳನ್ನು ನಾಶಪಡಿಸಿವೆ. ಈ ಬಗ್ಗೆ ಪಡೆದ ಮೂಡಿಗೆರೆ ಹಾಗೂ ಆಲ್ದೂರು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಾಡಾನೆಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸಾಧ್ಯತೆ ಇರುವುದರಿಂದ ರಾತ್ರಿ ಸಮಯದಲ್ಲಿ ಅನಾವಶ್ಯಕವಾಗಿ ಯಾರೂ ಹೊರಗೆ ತಿರುಗಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳನ್ನು ಕಾಡಿನತ್ತ ಹಿಮ್ಮೆಟ್ಟಿಸಬೇಕು ಹಾಗೂ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೂರು ತಾಯಿ ಆನೆಗಳ ಹಿಂಬಾಲಿಸಿದ 3 ಮರಿಗಳು: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಮನಮೋಹಕ ದೃಶ್ಯ - MOTHER ELEPHANTS WITH CHILDREN
Comments