ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಬೆಂಗಳೂರು ಜಲಮಂಡಳಿ ನೀರು ಸರಬರಾಜು ಮಾಡುವ ಪೈಪ್ಲೈನ್ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದ ಹಾಗೂ 30 ಕೆ.ಜಿಗೂ ಹೆಚ್ಚು ತೂಕವಿರುವ ಈ ಹೆಬ್ಬಾವು, ಜಿಂಕೆಯೊಂದನ್ನು ಸಂಪೂರ್ಣವಾಗಿ ನುಂಗಿ, ಮುಂದೆ ಹೋಗಲಾರದೆ ಒಂದೇ ಕಡೆ ಮಲಗಿತ್ತು.ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಟ್ಟರು.ಕಾಳಿಂಗ ಸರ್ಪವೊಂದು ಮನೆಯೊಳಗೆ ನುಗ್ಗಲು ಯತ್ನಿಸಿದ ಘಟನೆ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ ಸಮೀಪದ ಕೆ. ತಲಗೂರು ಗ್ರಾಮದಲ್ಲಿ ನಡೆದಿತ್ತು. ಅಲ್ಲಿನ ನಿವಾಸಿ ಮಂಜುನಾಥ್ ಆಚಾರ್ ಅವರ ಮನೆಯ ಮುಂಭಾಗಕ್ಕೆ ಬರೋಬ್ಬರಿ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಬಂದಿತ್ತು. ಕೆಲ ಸಮಯ ಮನೆಯೊಳಗೆ ನುಗ್ಗಲು ಯತ್ನಿಸಿದ್ದು, ಈ ದೃಶ್ಯವನ್ನು ಕಂಡ ಮನೆಯಲ್ಲಿದ್ದ ತಾಯಿ ಹಾಗೂ ಮೂವರು ಹೆಣ್ಣುಮಕ್ಕಳು ಭಯಭೀತರಾಗಿ ಹೊರಗೆ ಓಡಿ ಬಂದಿದ್ದರು.ಮನೆಯವರ ಕೂಗಾಟ ಕೇಳಿ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದ್ದು, ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಳಿಕ ಬಣಕಲ್ ಭಾಗದ ಖ್ಯಾತ ಉರಗ ರಕ್ಷಕ ಆರೀಫ್ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಆರೀಫ್ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದರು.ಇದನ್ನೂ ಓದಿ: ಮನೆಗೆ ನುಗ್ಗಿ ಐದು ಕೋಳಿ ಮೊಟ್ಟೆ ನುಂಗಿದ ನಾಗರಹಾವು ಸೆರೆ: ನಿಟ್ಟುಸಿರು ಬಿಟ್ಟ ಮನೆಯ ಸದಸ್ಯರು
Comments