ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಹಾವಿನಾಳ ಗ್ರಾಮದ ಬಳಿ ಇರುವ ದತ್ತ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಬಗ್ಯಾಸ್ಗೆ ಬೆಂಕಿ ಹೊತ್ತಿಕೊಂಡು ಘಟನೆ ನಡೆದಿದೆ. ಇದರಿಂದ ಕಾರ್ಖಾನೆ ಯಂತ್ರೋಪಕರಣಗಳಿಗೂ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿವೆ.ಬೆಂಕಿ ಹಿನ್ನೆಲೆಯಲ್ಲಿ, ಕಾರ್ಖಾನೆಯಲ್ಲಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಅವಘಡದಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅವಘಡದಿಂದ ಉಂಟಾದ ಹಾನಿ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.ಪ್ರತ್ಯೇಕ ಘಟನೆ, ಕಾರು ಸರ್ವೀಸ್ ಸೆಂಟರ್ಗೆ ಬೆಂಕಿ: ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಹೆಚ್.ಎಂ.ಕೆ. ಕಾರು ಸರ್ವೀಸ್ ಸೆಂಟರ್ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರುಗಳು ಸುಟ್ಟು ಕರಕಲಾದ ಘಟನೆ ಬುಧವಾರ ಸಂಜೆ ಸಂಭವಿಸಿದೆ.ಘಟನೆಯಲ್ಲಿ, ರಿಪೇರಿ ಹಾಗೂ ಸರ್ವೀಸ್ಗಾಗಿ ಬಂದಿದ್ದ ಸುಮಾರು 20 ಕಾರುಗಳು ಸುಟ್ಟುಹೋಗಿವೆ. ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ಆಗದಂತೆ ತಡೆದಿದ್ದಾರೆ.ಘಟನೆಯಿಂದ ಸುತ್ತಮುತ್ತಲು ದಟ್ಟ ಹೊಗೆ ಆವರಿಸಿತ್ತು. ಅದೃಷ್ಟವಶಾತ್ ಸರ್ವೀಸ್ ಸೆಂಟರ್ನಲ್ಲಿ ಯಾರೂ ಇರಲಿಲ್ಲ. ಅಂದಾಜು 35 ಲಕ್ಷ ರೂಪಾಯಿ ಬಿಡಿ ಭಾಗಗಳು, ಒಂದು ಕೋಟಿಗೂ ಅಧಿಕ ಬೆಲೆಬಾಳುವ ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಗೋಲಗುಂಬಜ್ ಹಾಗೂ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ.ಇದನ್ನೂ ಓದಿ: ನಾಡಿಗೆ ಎಂಟ್ರಿ ಕೊಟ್ಟ ಗಜರಾಜ: ಕಾಡಿಗೆ ಹಿಮ್ಮೆಟ್ಟಿಸಿದ ಅರಣ್ಯ ಇಲಾಖೆ
Comments