Skip to playerSkip to main content
  • 6 weeks ago
ಮೈಸೂರು: ಹಿಡಿಯಲು ಬಂದವರ ಮೇಲೆರಗಿದ ಚಿರತೆ ಮರಿಯನ್ನು ಹಗ್ಗದಿಂದ ಹಿಡಿದ ಗ್ರಾಮಸ್ಥರು, ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.ತಾಲೂಕಿನ ಹೋಬಳಿಯ ಹುಲ್ಯಾಳು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ನಾಗಣ್ಣನ ಪುತ್ರ ಅಜಯ್ ಹಾಗೂ ಕೋಳಿ ಫಾರಂ ಮಾಲೀಕ ಕೆ.ಆರ್.ನಗರದ ನಿವಾಸಿ ರಾಜು ಚಿರತೆ ಮರಿ ದಾಳಿಯಿಂದ ಗಾಯಗೊಂಡವರು. ಅಜಯ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ರಾಜು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಗ್ರಾಮದಲ್ಲಿ ಶನಿವಾರ ಸಂಜೆ ಗ್ರಾಮದೊಳಗೆ ಬಂದ ಚಿರತೆ ಮರಿ ಅಜಯ್‌ ಅವರಿಗೆ ಸೇರಿದ ಹುಲ್ಲಿನ ಮೆದೆಯೊಳಗೆ ಅಡಗಿ ಕುಳಿತಿತ್ತು. ಪಕ್ಕದಲ್ಲೇ ನಡೆದು ಹೋಗುತ್ತಿದ್ದ ಅಜಯ್ ಮೇಲೆರಗಿ ಕೈಗೆ ಕಚ್ಚಿದೆ. ಈ ವೇಳೆ ಅಜಯ್ ಜೋರಾಗಿ ಕಿರುಚಿದಾಗ, ನೆರವಿಗೆ ಧಾವಿಸಿದ ಕೋಳಿ ಫಾರಂ ಮಾಲಿಕ ರಾಜು ಅವರ ಮೇಲೂ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿ, ಹುಲ್ಲಿನ ಮೆದೆ ಸೇರಿಕೊಂಡಿದೆ.ಬಳಿಕ ಗ್ರಾಮಸ್ಥರು ತಾವೇ ಹುಲ್ಲಿನ ಮೆದೆ ಸುತ್ತುವರೆದು, ಹಗ್ಗ ಹಾಗೂ ಬಲೆ ಸಹಾಯದಿಂದ ಚಿರತೆ ಮರಿಯನ್ನು ಸೆರೆ ಹಿಡಿದಿದ್ದಾರೆ. ಮಾಹಿತಿ ಮೇರೆಗೆ ಹುಣಸೂರಿನ ಡಿಆರ್‌ಎಫ್​ಓ ರಮಣಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಒಂದು ವರ್ಷದ ಚಿರತೆ ಮರಿಯನ್ನು ವಶಕ್ಕೆ ಪಡೆದು ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿ, ಭಾನುವಾರ ಬೆಳಗ್ಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದಾರೆ.ಬೋನಿನಲ್ಲಿ ಮರಿ ಚಿರತೆ ಸೆರೆ: ಕೆಲವು ದಿನಗಳಿಂದ ಈ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ, ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಬೋನ್ ಇಟ್ಟಿತ್ತು. ಆದರೆ, ತಾಯಿ ಬೀಳುವ ಸ್ಥಳದಲ್ಲಿ ಮರಿಯನ್ನು ಗ್ರಾಮಸ್ಥರು ಹಿಡಿದು ಹಾಕಿದ್ದಾರೆ. ಈಗ ತಾಯಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.ಇದನ್ನೂ ನೋಡಿ: ಭದ್ರಾ ಹುಲಿ ಅಭಯಾರಣ್ಯದಲ್ಲಿ ಕಪ್ಪು ಚಿರತೆ - ಚುಕ್ಕಿ ಚಿರತೆ ಗೋಚರ: ಸಫಾರಿ ಪ್ರಿಯರ ಸಂಖ್ಯೆ ದುಪ್ಪಟ್ಟು

Category

🗞
News
Comments

Recommended