ದೊಡ್ಡಬಳ್ಳಾಪುರ/ಕೋಲಾರ: ಮಾವಿಗೆ ಬೆಲೆ ಕುಸಿದಿದ್ದು, ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ, ರೈತರು ನಡು ರಸ್ತೆಯಲ್ಲಿ ಮಾವು ಸುರಿದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಮಾವು ಬೆಳೆದ ರೈತರ ಗೋಳು ಕೇಳೋರೇ ಇಲ್ಲದಂತಾಗಿದೆ. ಸುಮಾರು 4-5 ವರ್ಷಗಳಿಂದ ಮಾವಿಗೆ ಬೆಲೆ ಇಲ್ಲದೆ ರೈತರು ಕಂಗಾಲಾಗುತ್ತಿದ್ದಾರೆ. ಶ್ರೀನಿವಾಸಪುರ ಭಾಗದಲ್ಲಿ ಬೆಳೆಯುವ ಮಾವಿಗೆ ಪ್ರಪಂಚದಲ್ಲಿ ಉತ್ತಮ ಬೇಡಿಕೆ ಇದೆ. ಆದರೆ ಕೆಲ ವೈಫಲ್ಯಗಳಿಂದ ಮಾವಿನ ಬೇಡಿಕೆ ತೀರ ಕಡಿಮೆಯಾಗಿದೆ. ರೈತರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಒಂದು ವರ್ಷ ಫಸಲು ಹೆಚ್ಚಿದ್ದರೆ ಬೆಲೆ ಕುಸಿಯುತ್ತಿತ್ತು. ಬೆಲೆ ಹೆಚ್ಚಿದ್ದರೆ ಫಸಲು ಕಡಿಮೆಯಾಗುತ್ತಿತ್ತು. ಈ ವರ್ಷ ಉತ್ತಮ ಫಸಲಿದ್ದರೂ, ಒಳ್ಳೆ ಬೆಲೆ ಸಿಗದಂತಾಗಿದೆ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಸಂಕಷ್ಟವನ್ನು ಅರಿತು, ಕನಿಷ್ಠ 10 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು. ಹಾಗೂ ಮಾವು ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸ್ಥಳೀಯ ಮುಖಂಡರು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ನಾರಾಯಣಗೌಡ ಮನವಿ ಮಾಡಿದರು.ಪ್ರತಿಭಟನೆ ನಡೆಸಿದ ರೈತರು ತಾಲೂಕು ದಂಡಾಧಿಕಾರಿ ಸುಧೀಂದ್ರ ಅವರ ಮೂಲಕ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇನ್ನು ಮನವಿಯನ್ನು ಸ್ವೀಕರಿಸಿದ ದಂಡಾಧಿಕಾರಿ ರೈತರ ಮನವಿಯನ್ನು ಕೂಡಲೇ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ತಲುಪಿಸಿ ಸಂಕಷ್ಟ ಬಗೆಹರಿಸುವ ಭರವಸೆ ನೀಡಿದರು.ಇದನ್ನೂ ನೋಡಿ: ಪ್ರತಿಭಟನೆ ವೇಳೆ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ಕಪಾಳಮೋಕ್ಷ: ಇಬ್ಬರ ಬಂಧನ
Comments