ಶಿವಮೊಗ್ಗ : ಜಿಲ್ಲೆಯ ಅಪ್ಪಟ ಮಲೆನಾಡಿನ ಸುಂದರ ತಾಲೂಕಾಗಿರುವ ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಗಾಗಿ ಆಗ್ರಹಿಸಿ ತಾಲೂಕಿನ ಜನತೆ ಪಕ್ಷಾತೀತವಾಗಿ ಹೋರಾಟ ಪ್ರಾರಂಭಿಸಿದ್ದಾರೆ. ಹೋರಾಟವು ಪಾದಯಾತ್ರೆಯ ಮೂಲಕ ಪ್ರಾರಂಭವಾಗಿದೆ. ಚುನಾವಣಾ ಆಯೋಗವು ನಡೆಸಿದ ಕ್ಷೇತ್ರ ವಿಂಗಡಣೆಯಿಂದ ಹೊಸನಗರ ಕ್ಷೇತ್ರ ಸಾಗರ ಹಾಗೂ ತೀರ್ಥಹಳ್ಳಿಗೆ ಹರಿದು ಹಂಚಿ ಹೋಗಿದೆ. ಹೊಸನಗರದ ಅರ್ಧ ಕ್ಷೇತ್ರ ಸಾಗರಕ್ಕೆ, ಇನ್ನರ್ಧ ತೀರ್ಥಹಳ್ಳಿಗೆ ಹೋಗಿದೆ. ಇದರಿಂದ ಕ್ಷೇತ್ರಕ್ಕೆ ಇಬ್ಬರು ಶಾಸಕರಾದ್ರೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂಬುದು ಸ್ಥಳೀಯರ ವಾದವಾಗಿದೆ. ಹೊಸನಗರ ಕ್ಷೇತ್ರ ಮರು ಸ್ಥಾಪನೆಯಾದ್ರೆ, ಸ್ಥಳೀಯವಾಗಿ ಶಾಸಕರು ಸಿಗುತ್ತಾರೆ. ಇದರಿಂದ ಕ್ಷೇತ್ರದ ಧ್ವನಿಯಾಗುತ್ತಾರೆ ಎಂದರು. ನಗರದಿಂದ ರಿಪ್ಪನ್ಪೇಟೆ ತನಕ ಪಾದಯಾತ್ರೆ : ಕ್ಷೇತ್ರ ಮರುಸ್ಥಾಪನೆ ಆಗಬೇಕೆಂದು ಹೊಸನಗರ ತಾಲೂಕು ಹೋರಾಟ ಸಮಿತಿ ಹೊಸನಗರ ತಾಲೂಕಿನ ನಗರ ಗ್ರಾಮದಿಂದ ರಿಪ್ಪನ್ಪೇಟೆ ತನಕ ಪಾದಯಾತ್ರೆ ನಡೆಸಿತು. ಪಾದಯಾತ್ರೆಯಲ್ಲಿ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಮಾಜಿ ಶಾಸಕರಾದ ಸ್ವಾಮಿರಾವ್, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕರಾದ ಹಾಲಪ್ಪ ಹರತಾಳು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ, ಶಿಮೂಲ್ ಅಧ್ಯಕ್ಷ ವಿದ್ಯಾಧರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್, ವೀರೇಶ್ ಅಲವಳ್ಳಿ ಸೇರಿ ಸಾವಿರಾರು ಸಂಖ್ಯೆಯಲ್ಲಿ ತಾಲೂಕಿನ ಜನತೆ ಭಾಗಿಯಾಗಿದ್ದರು.ಹೋರಾಟದ ಕುರಿತು ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್ ಅವರು, 'ಹೊಸನಗರ ವಿಧಾನಸಭ ಕ್ಷೇತ್ರ ಮರುಸ್ಥಾಪನೆಯ ಹೋರಾಟದ ಭಾಗವಾದ ಪಾದಯಾತ್ರೆಗೆ ಸ್ವಾಮೀಜಿಗಳು, ರಾಜಕೀಯ ಮುಖಂಡರು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ಜೊತೆಗೆ ಸಂಘ ಸಂಸ್ಥೆಗಳು ಸಹ ಬೆಂಬಲ ನೀಡಿರುವುದು ಖುಷಿಯಾಗಿದೆ. ಹೋರಾಟಕ್ಕೆ ನಿರಂತರ ಬೆಂಬಲ ಸಿಕ್ಕರೆ, ಹೋರಾಟದಿಂದ ಕ್ಷೇತ್ರವನ್ನು ಮತ್ತೆ ಪಡೆಯಬಹುದು' ಎಂದು ಹೇಳಿದರು.ಇದನ್ನೂ ಓದಿ : ಬೊಮ್ಮೇನಹಳ್ಳಿಯಲ್ಲಿ 28 ಕಾಡಾನೆಗಳ ಹಿಂಡು: ರಾತ್ರಿ ಸಂಚಾರಕ್ಕೆ ಅರಣ್ಯ ಇಲಾಖೆ ಬ್ರೇಕ್ - WILD ELEPHANTS SPOTTED
Comments