ಶಿವಮೊಗ್ಗ: ಮಧ್ಯ ಪ್ರಾಚ್ಯದ ಯದ್ದದಿಂದಾಗಿ ಜಿಲ್ಲೆಯಲ್ಲಿ ವಾಣಿಜ್ಯ ಸಿಲಿಂಡರ್ಗೆ ಕೊರತೆ ಉಂಟಾಗಿದ್ದು, ಇದರಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ನಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಊಟದ ವಿತರಣೆಯನ್ನು ಬಂದ್ ಮಾಡಲಾಗಿದೆ.ಶಿವಮೊಗ್ಗದಲ್ಲಿ ಎಪಿಎಂಸಿ, ಬಸ್ ನಿಲ್ದಾಣ, ಡಿಡಿಪಿಐ ಕಚೇರಿ ಮುಂಭಾಗ, ವಿದ್ಯಾನಗರ, ದ್ರೌಪದಮ್ಮನ ವೃತ್ತ ಹಾಗೂ ವಿನೋಬನಗರಗಳಲ್ಲಿ ಇಂದಿರಾ ಕ್ಯಾಂಟೀನ್ಗಳಿವೆ. ಈಗ ಈ ಎಲ್ಲಾ ಕ್ಯಾಂಟೀನ್ಗಳಲ್ಲಿ ಕೇವಲ ತಿಂಡಿಯನ್ನು ಮಾತ್ರ ನೀಡಲಾಗುತ್ತಿದೆ. ಪ್ರತಿನಿತ್ಯ ಆಹಾರ ತಯಾರಿಕೆಗೆ ಎರಡು ಸಿಲಿಂಡರ್ ಬೇಕು. ಆದರೆ, ಈಗ ಸಿಲಿಂಡರ್ ಕೊರತೆಯಿಂದ ಸಾಂಬಾರ್, ತಿಳಿಸಾರು, ಪಲ್ಯಗಳನ್ನು ಮಾಡಲು ಆಗುತ್ತಿಲ್ಲ. ಇದರಿಂದ ಒಂದೇ ಬಾರಿ ಸುಲಭವಾಗಿ ತಯಾರು ಮಾಡುವ ಆಹಾರ ಮಾತ್ರ ತಯಾರಿಸಲಾಗುತ್ತಿದೆ. ಇದರಿಂದ ಬಡವರ ಮಧ್ಯಾಹ್ನದ ಊಟಕ್ಕೆ ಕತ್ತರಿ ಬಿದ್ದಂತಾಗಿದೆ.ಈ ಕುರಿತು ಇಂದಿರಾ ಕ್ಯಾಂಟೀನ್ ಮಾಸ್ಟರ್ ಕಿಚನ್ನ ಉಸ್ತುವಾರಿ ಅಮರನಾಥ್ 'ಈಟಿವಿ ಭಾರತ' ಜೊತೆ ಮಾತನಾಡಿದ್ದು, 'ಕಳೆದ ಮೂರು ದಿನಗಳಿಂದ ಸಿಲಿಂಡರ್ ಸಿಗುತ್ತಿಲ್ಲ. ಶಿವಮೊಗ್ಗದಲ್ಲಿ ಒಟ್ಟು 6 ಇಂದಿರಾ ಕ್ಯಾಂಟೀನ್ಗಳಿವೆೆ. ಈ ಎಲ್ಲಾ ಕಡೆ ಮಧ್ಯಾಹ್ನದ ಊಟ ಸಪ್ಲೈ ಆಗುತ್ತಿಲ್ಲ. ಬೆಳಗ್ಗೆ ತಿಂಡಿ ಮಾತ್ರ ಕೊಡುತ್ತಿದ್ದೇವೆ. ಮೆನು ಪ್ರಕಾರ ಹಿಂದೆ ಎಲ್ಲವನ್ನೂ ಕೊಡುತ್ತಿದ್ದೆವು. ಆದರೆ, ಸಿಲಿಂಡರ್ ಸಿಗದ ಕಾರಣಕ್ಕೆ ಮಧ್ಯಾಹ್ನದ ಊಟ ಸರಬರಾಜು ಮಾಡುತ್ತಿಲ್ಲ. ಈಗ ಚಿತ್ರನ್ನ, ಪುಳಿಯೋಗರೆ, ಪಲಾವ್ ಇಂತಹ ತಿಂಡಿ ಮಾತ್ರ ನೀಡುತ್ತಿದ್ದೇವೆ. ಊಟದ ಬದಲು ತಿಂಡಿ ಕೊಡಲಾಗುತ್ತಿದೆ. ಪ್ರತಿನಿತ್ಯ 750 ಊಟ ಹೋಗುತ್ತಿತ್ತು. ನಮಗೆ ದಿನಾಲೂ ಎರಡು ಸಿಲಿಂಡರ್ ಬೇಕು. ಸಿಲಿಂಡರ್ ಬೇಕೆಂದು ಎಲ್ಲರಿಗೂ ಹೇಳಿದ್ದೇವೆ, ಯಾರೂ ಸ್ಪಂದಿಸುತ್ತಿಲ್ಲ' ಎಂದರು.ಇದನ್ನೂ ಓದಿ : ಕಮರ್ಷಿಯಲ್ ಉದ್ದೇಶಕ್ಕೆ ಗೃಹ ಬಳಕೆ ಸಿಲಿಂಡರ್ ಬಳಕೆ: 316 ಸಿಲಿಂಡರ್ ಜಪ್ತಿ; ಗ್ಯಾಸ್ ಏಜೆನ್ಸಿಗಳ ಸೋಗಿನಲ್ಲಿ ಸೈಬರ್ ಖದೀಮರಿಂದ ವಂಚನೆ
Comments