ಮೈಸೂರು: ದೀಪಾವಳಿ ಅಮಾವಾಸ್ಯೆ ಸಂದರ್ಭದಲ್ಲಿ ಐತಿಹಾಸಿಕ ಪಿರಿಯಾಪಟ್ಟಣ ಮಲ್ಲಿಕಾರ್ಜುನಸ್ವಾಮಿ ಬೆಟ್ಟ ದೇವರ ದರ್ಶನ ಪಡೆದಿದ್ದು ಧನ್ಯತಾ ಭಾವ ಮೂಡಿಸಿತು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಭಕ್ತರೊಂದಿಗೆ ಇಂದು ಪಾದಯಾತ್ರೆ ಮೂಲಕ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಶಿಡ್ಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟ ಹತ್ತಿದ ಸಂಸದರು, ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.ನಂತರ ಸುದ್ದಿಗಾರರ ಜೊತೆ ಮಾತನಾಡಿದ ಯದುವೀರ್, ನಮ್ಮ ಕ್ಷೇತ್ರದ ಸಾವಿರಾರು ಭಕ್ತರೊಂದಿಗೆ ಪಾದಯಾತ್ರೆ ಕೈಗೊಂಡು, ಸ್ವಾಮಿಯ ದರ್ಶನ ಪಡೆದಿದ್ದು ವಿಶೇಷ ಅನುಭೂತಿ ನೀಡಿತು. ಈ ಬೆಳಕಿನ ಹಬ್ಬ ದೀಪಾವಳಿ ನಾಡಿನ ಪ್ರತಿಯೊಬ್ಬರಿಗೂ ಸುಖ, ಶಾಂತಿ, ಸಮೃದ್ಧಿ ತರಲಿ. ನಾಡು ಸದಾ ಸುಭಿಕ್ಷವಾಗಿರಲಿ ಎಂದು ತಿಳಿಸಿದರು.ಬೆಟ್ಟ ಅಭಿವೃದ್ಧಿಪಡಿಸಲು ಸಂಕಲ್ಪ: ಸಾವಿರಾರು ಭಕ್ತರು ಈ ಐತಿಹಾಸಿಕ ಬೆಟ್ಟದೊಂದಿಗೆ ಧಾರ್ಮಿಕ ಭಾವನೆ ಬೆಸೆದುಕೊಂಡಿದ್ದಾರೆ. ಈ ಬೆಟ್ಟವನ್ನು ಅಭಿವೃದ್ಧಿಪಡಿಸಲು ಇದೇ ಸಂದರ್ಭದಲ್ಲಿ ಸಂಕಲ್ಪ ತೊಡುತ್ತೇನೆ ಎಂದು ಯದುವೀರ್ ಭರವಸೆ ನೀಡಿದರು.ರಾಜ್ಯ ಸರ್ಕಾರವು ಈ ಬೆಟ್ಟವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದರಿಂದ ಭಕ್ತರು ಬೇಸರಗೊಂಡಿದ್ದಾರೆ. ಪಾದಯಾತ್ರೆ ವೇಳೆ ಕೆಲವು ಭಕ್ತರು ಅಳಲು ತೋಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಮಾಡಿರುವ ಪ್ರಮಾದವನ್ನು ಸರಿಪಡಿಸಲಾಗುವುದು. ಶಿಡ್ಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟವನ್ನು ಅಭಿವೃದ್ದಿಪಡಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಲಿಪಾಡ್ಯಮಿಯಂದು ಮುಜರಾಯಿ ದೇವಾಲಯಗಳಲ್ಲಿ ಗೋಪೂಜೆ ನಡೆಸಲು ಸೂಚನೆ
Be the first to comment