ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಬಸವರಾಜ ಮುತ್ತಗಿ ಟೆಂಪಲ್ ರನ್ ನಡೆಸಿದ್ದಾರೆ. ಅವರು ಗುರುವಾರ ನಗರದ ಕೆಸಿಡಿ ವೃತ್ತದ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಸಿಆರ್ಪಿಎಫ್ ಭದ್ರತೆಯಲ್ಲಿ ದೇವಾಲಯಕ್ಕೆ ಬಂದಿದ್ದ ಬಸವರಾಜ ಮುತ್ತಗಿ, ಮಾಧ್ಯಮದವರೊಂದಿಗೆ ಮಾತನಾಡಿ, ನಿಜವಾದ ಹೋರಾಟ ಇಂದು ಆರಂಭವಾಗಲಿದೆ. ದೇವರು ನಮಗೆ ಮತ್ತಷ್ಟು ಶಕ್ತಿ ಕೊಡಲಿ ಅಂತಾ ಪ್ರಾರ್ಥಿಸಿದ್ದೇನೆ. ಹೋರಾಟ ಆರಂಭವಾಗಿದ್ದು ಇಲ್ಲಿಂದಲೇ, ಇಲ್ಲಿಯೇ ಪ್ರಾರ್ಥಿಸಿ ಹೋರಾಟ ಪ್ರಾರಂಭಿಸಿದ್ದೆ. ಕೊಲೆ ನಡೆದಾಗ ನಾವು ಇದೇ ವೃತ್ತದ ಬಳಿ ಇದ್ದೆವು. ಹೀಗಾಗಿ ನನಗೆ ಪಶ್ಚಾತಾಪ ಕಾಡುತ್ತಿತ್ತು. ಹೀಗಾಗಿ ಬಂದು ದೇವರ ದರ್ಶನ ಪಡೆದಿದ್ದೇನೆ ಎಂದು ತಿಳಿಸಿದರು.ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಮಂದಿ ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ದೋಷಿಗಳು ಎಂದು ತೀರ್ಪು ಪ್ರಕಟಿಸಿದೆ. ಹೀಗಾಗಿ, ಜಾಮೀನಿನ ಮೇಲೆ ಹೊರಗಿರುವ ವಿನಯ್ ಕುಲಕರ್ಣಿ ಮತ್ತೆ ಜೈಲು ಸೇರಲಿದ್ದಾರೆ.ನಮ್ಮ ಕುಟುಂಬಕ್ಕೂ ಭದ್ರತೆ ನೀಡಿ: ಪ್ರಕರಣದಲ್ಲಿ ಮೃತ ಯೋಗೇಶ್ ಗೌಡ ಕುಟುಂಬದ ಜೊತೆ ನಿಂತು ಹೋರಾಟ ಮಾಡಿದ್ದ ಬಸವರಾಜ ಕೊರವರ ಅವರ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ನಮ್ಮ ಕುಟುಂಬಕ್ಕೆ ಸಹ ಭದ್ರತೆ ನೀಡಬೇಕು ಎಂದು ಕೊರವರ ಪತ್ನಿ ಸುಮಂಗಲಾ ಕೊರವರ ಆಗ್ರಹಿಸಿದ್ದಾರೆ. ಪ್ರಕರಣದ ಹೋರಾಟ ಮಾಡುವಾಗಲೇ ಸಾಕಷ್ಟು ರೀತಿ ಬೆದರಿಕೆ ಕರೆಗಳು ಬರುತ್ತಿದ್ದವು. ಪ್ರಭಾವಿಗಳಿದ್ದಾರೆ, ನಮಗೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಮತ್ತಿತರರು ದೋಷಿಗಳೆಂದು ವಿಶೇಷ ನ್ಯಾಯಾಲಯದ ತೀರ್ಪು
Comments