ಬೆಂಗಳೂರು: ಕಾಂಡಿಮೆಂಟ್ಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುರು (28) ಹಾಗೂ ವಿಶ್ವಾಸ್ (24) ಬಂಧಿತರು.ಕಳೆದ ಬುಧವಾರ ಸಂಜೆ ಸಂಜಯನಗರದ ಭೂಪಸಂದ್ರದಲ್ಲಿರುವ ಶ್ರೀ ಗುರು ರಾಘವೇಂದ್ರ ಕಾಂಡಿಮೆಂಟ್ಸ್ ಬಳಿ ಬಂದಿದ್ದ ಆರೋಪಿಗಳು, ಸಿಗರೇಟು ವಿಚಾರವಾಗಿ ಕಾಂಡಿಮೆಂಟ್ಸ್ ಸಿಬ್ಬಂದಿ ಮೇಲೆ ಹಲ್ಲೆಗೈದು ಬೆದರಿಕೆ ಹಾಕಿದ್ದರು. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾಂಡಿಮೆಂಟ್ಸ್ ಬಳಿ ಬಂದು ಜ್ಯೂಸ್ ಕೇಳಿದ್ದ ಆರೋಪಿಗಳು, ಸಿಗರೇಟ್ ಕೊಡುವಂತೆ ಅವಾಚ್ಯ ಶಬ್ಧಗಳಿಂದ ಸಿಬ್ಬಂದಿಯನ್ನು ನಿಂದಿಸಿದ್ದರು. "ಇತರೆ ಗ್ರಾಹಕರ ಮುಂದೆ ಗಲಾಟೆ ಮಾಡಬೇಡಿ, ಸಿಗರೇಟ್ ಬೇಕಿದ್ದರೆ ಹಣ ಕೊಡಿ" ಎಂದು ಕಾಂಡಿಮೆಂಟ್ಸ್ ಸಿಬ್ಬಂದಿ ಕೇಳಿದಾಗ, "ನಮ್ಮ ಬಳಿಯೇ ಹಣ ಕೇಳುತ್ತೀಯಾ?. ನಾವು ಕೇಳಿದಾಗ ಸಿಗರೇಟ್ ಕೊಡದಿದ್ದರೆ ಅಂಗಡಿ ನಡೆಸಲು ಬಿಡುವುದಿಲ್ಲ" ಎಂದು ನಿಂದಿಸುತ್ತಾ ಹಲ್ಲೆ ಮಾಡಿದ್ದರು. ಆರೋಪಿಗಳ ಪುಂಡಾಟಿಕೆ ಕಾಂಡಿಮೆಂಟ್ಸ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಕಾಂಡಿಮೆಂಟ್ಸ್ನ ಸಿಬ್ಬಂದಿಯಿಂದ ದೂರು ಪಡೆದ ಸಂಜಯನಗರ ಠಾಣೆ ಪೊಲೀಸರು, ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ.ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾತನಾಡಿ, "ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕರಿ ಮಾಲೀಕರು ದೂರು ನೀಡಿದ್ದು, ಎಫ್ಐಆರ್ ದಾಖಲಿಸಿದ್ದೇವೆ. ನಂತರ ಇಬ್ಬರನ್ನು ನಿನ್ನೆ ಬಂಧಿಸಿ, ಇವತ್ತು ಬೆಳಗ್ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ" ಎಂದರು.ಇದನ್ನೂ ಓದಿ: ಹೊಸ ವರ್ಷಾಚರಣೆ ದಿನ ಕಾನ್ಸ್ಟೇಬಲ್ ಮೇಲೆ ಹಲ್ಲೆ: ವಿದೇಶಿ ಪ್ರಜೆ ಅರೆಸ್ಟ್ - FOREIGN NATIONAL ARREST
Be the first to comment