ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳ ಹಾವಳಿ ಮುಂದುವರೆದಿದೆ. ರಾತ್ರಿ ವೇಳೆ ಕಾಫಿ, ಅಡಿಕೆ ಹಾಗೂ ಮೆಣಸಿನಕಾಳು ತೋಟಗಳಿಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳು, ಈಗ ಹೋಂ ಸ್ಟೇಗಳಿಗೂ ನುಗ್ಗುತ್ತಿವೆ.ಗುರುವಾರ ಬೆಳಗಿನ ಜಾವ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದಲ್ಲಿ ಶಿವು ಎಂಬವರಿಗೆ ಸೇರಿದ ಉದಯಗಿರಿ ಹೋಂ ಸ್ಟೇ ಒಳಗೆ ಬೃಹತ್ ಗಾತ್ರದ ಒಂಟಿ ಸಲಗವೊಂದು ಬಂದು ಕೆಲಹೊತ್ತು ಸಂಚರಿಸಿದೆ. ಸಿಸಿಟಿವಿ ದೃಶ್ಯಗಳನ್ನು ನೋಡಿ ಹೋಂ ಸ್ಟೇ ಮಾಲೀಕರು, ಸಿಬ್ಬಂದಿ ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸುಮಾರು 7 ನಿಮಿಷಗಳ ಕಾಲ ಹೋಂ ಸ್ಟೇ ಸುತ್ತಮುತ್ತ ಓಡಾಡಿದ ಕಾಡಾನೆ, ಕಾಂಪೌಂಡ್ ದಾಟಲು ಜಾಗ ಹುಡುಕುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಆನೆಯನ್ನು ಕಾಡಿಗೆ ಓಡಿಸಬೇಕೆಂದು ಹೋಂ ಸ್ಟೇ ಮಾಲೀಕರು, ಅಕ್ಕಪಕ್ಕದ ಕಾಫಿ ತೋಟಗಳ ಮಾಲೀಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಈಗಾಗಲೇ ಕಾಡಾನೆಗಳ ಟ್ರ್ಯಾಕಿಂಗ್ ಬಗ್ಗೆ ಹೆಚ್ಚಿನ ನಿಗಾ ವಹಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿನಿತ್ಯ ಅವುಗಳ ಚಲನವಲನದ ಬಗ್ಗೆ ಗಮನಹರಿಸಿ ಹಳ್ಳಿ, ಹಳ್ಳಿಗಳಿಗೆ ಭೇಟಿ ನೀಡಿ ಜನರು ಹಾಗೂ ಕಾಫಿ ತೋಟದ ಕಾರ್ಮಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಅಲ್ಲದೆ, ಮೈಕ್ ಮೂಲಕ ಅನೌನ್ಸ್ ಮಾಡುತ್ತಾ ಎಚ್ಚರಿಕೆಯಿಂದ ಇರಲು ಸೂಚಿಸುತ್ತಿದ್ದಾರೆ.ಇದನ್ನೂ ಓದಿ: ಹಾಸನ: ಕಾಡಾನೆ ಕಾರ್ಯಾಚರಣೆ ವೇಳೆ ಕ್ಷಣಾರ್ಧದಲ್ಲಿ ಎಸ್ಕೇಪ್ ಆದ ಪುಂಡಾನೆ; ಕಾವಾಡಿಗನ ಮೇಲೆ ಸಾಕಾನೆ ಸುಗ್ರೀವನ ದಾಳಿ
Comments