ಬೆಳಗಾವಿ: ಏಕಾಏಕಿ ಹೊತ್ತಿದ ಬೆಂಕಿಯಿಂದಾಗಿ ಗೋವಿನಜೋಳ ತುಂಬಿದ್ದ ಲಾರಿ ಸುಟ್ಟು ಕರಕಲಾಗಿ ಅಪಾರ ಪ್ರಮಾಣದ ಗೋವಿನಜೋಳ ಹಾನಿಯಾಗಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಯರಡಾಲ ಕ್ರಾಸ್ ಬಳಿ ಶನಿವಾರ ನಡೆಯಿತು.ಹುಬ್ಬಳ್ಳಿಯ ಶರೀಫ್ ಅಹ್ಮದ್ ಮುಲ್ಲಾ ಎಂಬವರಿಗೆ ಸೇರಿದ ಲಾರಿ ಇದಾಗಿದೆ. 620 ಚೀಲ ಗೋವಿನಜೋಳ ತುಂಬಿಕೊಂಡು ನರಗುಂದದಿಂದ ಬೆಳಗಾವಿ ಕಡೆ ಬರುತ್ತಿತ್ತು. ಬೈಲಹೊಂಗಲ ದಾಟಿ ಯರಡಾಲ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿಯಿಂದ ಜಿಗಿದು ಚಾಲಕ ಪಾರಾಗಿದ್ದಾನೆ. ಲಾರಿಯ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿದೆ ಎಂದು ತಿಳಿದು ಬಂದಿದೆ.ಗೋವಿನಜೋಳ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆದರೆ, ಅಷ್ಟರೊಳಗೆ ಬೆಂಕಿಯ ಪ್ರಖರತೆ ಹೆಚ್ಚಿದ್ದರಿಂದ ಲಾರಿ ಕರಕಲಾಗಿತ್ತು. ರಸ್ತೆಯಲ್ಲೇ ಲಾರಿ ಹೊತ್ತಿ ಉರಿಯುತ್ತಿರುವುದು ಕಂಡು ಸ್ಥಳೀಯರು ಭೀತಿಗೊಂಡಿದ್ದರು. ಆದರೂ ತಮ್ಮ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿಯುತ್ತಾ ನಿಂತಿದ್ದರು.ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಬಳ್ಳಾರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್- 25 ಕ್ಕೂ ಹೆಚ್ಚು ಹುಲ್ಲಿನ ಬಣವೆ ಭಸ್ಮ - PADDY STRAW BURNT
Comments