ಮೈಸೂರು : ನಾಗರಹೊಳೆ ಉದ್ಯಾನದಿಂದ ಆಹಾರ ಅರಸಿ ಹೊರಬಂದ ಕಾಡಾನೆಯೊಂದು ಮರಳಿ ಕಾಡಿಗೆ ಸೇರಲು ರೈಲ್ವೆ ಬ್ಯಾರಿಕೇಡ್ ಮೂಲಕ ನುಸುಳಲು ಹೋಗಿ, ಕಂಬಿಗೆ ಸಿಲುಕಿ ಕೆಲ ಹೊತ್ತು ಒದ್ದಾಡಿದ ಘಟನೆ ಹುಣಸೂರು ವನ್ಯಜೀವಿ ವಲಯದ ಐಯ್ಯನಕೆರೆ ಹಾಡಿ ಬಳಿ ನಡೆದಿದೆ. ಸುಮಾರು 25-30 ವರ್ಷದ ಸಲಗವೊಂದು ಆಹಾರ ಅರಸಿ ಬಂದು, ಜಮೀನಿನಲ್ಲಿ ಬೆಳೆದಿದ್ದ ಫಸಲುಗಳನ್ನು ತಿಂದು ತೇಗಿದೆ. ನಂತರ ಅದನ್ನು ಕಂಡಿರುವ ಜನರು ಕೂಗಾಟ ನಡೆಸಿ ಮತ್ತೆ ಕಾಡಿನತ್ತ ಓಡಿಸಲು ಯತ್ನಿಸಿದ್ದಾರೆ. ಜನರ ಕೂಗಾಟಕ್ಕೆ ಗಾಬರಿಯಾದ ಆನೆ ಕಾಡಿನೊಳಗೆ ಹೋಗುವ ರಭಸದಲ್ಲಿ ರೈಲ್ವೆ ಬ್ಯಾರಿಕೇಡ್ ತಡೆಗೋಡೆ ಕಂಬಿ ನುಸುಳಲು ಹೋಗಿ ಸಿಲುಕಿಕೊಂಡಿದೆ. ನಂತರ ಘೀಳಿಡುತ್ತ ಒದ್ದಾಡಿ ಕೊನೆಗೂ ಕಾಡಿಗೆ ಹೋಗಿದೆ. ಸ್ಥಳಕ್ಕೆ ಆನೆ ಕಾವಲು ಪಡೆ, ಅರಣ್ಯ ಸಿಬ್ಬಂದಿ ಧಾವಿಸಿದ್ದರು ಎಂದು ಆರ್ಎಫ್ಒ ಸುಬ್ರಮಣಿ ತಿಳಿಸಿದ್ದಾರೆ. 'ಜನರ ಕೂಗಾಟದಿಂದ ಗಾಬರಿಗೊಂಡಿದ್ದ ಆನೆಯು ಕಾಡಿನೊಳಗೆ ಸೇರುವ ಭರದಲ್ಲಿ ರೈಲ್ವೆ ಬ್ಯಾರಿಕೇಡ್ನ ಕೆಳಗೆ ಸಿಲುಕಿಕೊಂಡಿತ್ತು. ಕೊನೆಗೂ ಮೇಲೆದ್ದು ಉದ್ಯಾನವನ ಸೇರಿಕೊಂಡಿದೆ' ಎಂದು ಎಸಿಎಫ್ ಲಕ್ಷ್ಮಿಕಾಂತ್ ವಿವರಣೆ ನೀಡಿದ್ದಾರೆ.ಇದನ್ನೂ ಓದಿ : ಚಿಕ್ಕಮಗಳೂರು: ಕಾಡುಕೋಣಗಳ ಹಿಂಡು ಮತ್ತೆ ಪ್ರತ್ಯಕ್ಷ - WILD BUFFALOES
Comments