ಕಾರವಾರ: ಕಾರವಾರ ತಾಲೂಕಿನ ದೇವಬಾಗ್ ಕಡಲತೀರದಲ್ಲಿ ಸಮುದ್ರದ ಅಲೆಗಳೊಂದಿಗೆ ಸಾಕಷ್ಟು ಮೀನುಗಳು ದಡಕ್ಕೆ ತೇಲಿ ಬಂದಿವೆ. ಸ್ಥಳೀಯರು ಮುಗ್ಗಿಬಿದ್ದು ಮೀನುಗಳನ್ನು ಬಾಚಿಕೊಂಡು ಮನೆಗೆ ಕೊಂಡೊಯ್ದರು.ಕಳೆದ ವಾರ ಅಂಕೋಲಾ ತಾಲೂಕಿನ ಹಾರವಾಡದಲ್ಲೂ ಇದೇ ರೀತಿ ಮೀನುಗಳ ರಾಶಿ ಕಂಡುಬಂದಿತ್ತು. ಸಮುದ್ರದ ಅಬ್ಬರ ಮತ್ತು ಪ್ರವಾಹಕ್ಕೆ ಸಿಲುಕಿ ಮೀನುಗಳು ದಡಕ್ಕೆ ಬಂದಿರುವುದನ್ನು ಗಮನಿಸಿದ ಸ್ಥಳೀಯರು, ಇದೊಂದು ದೈವದತ್ತ ವರವೆಂದೇ ಭಾವಿಸಿ ಬಲೆ, ಬುಟ್ಟಿ, ಬಟ್ಟೆ ಮಾತ್ರವಲ್ಲದೇ ಕೆಲವರು ಬರಿಗೈಯಲ್ಲೇ ಮೀನುಗಳನ್ನು ಮನೆಗೆ ಕೊಂಡೊಯ್ದರು. ಕಡಲತೀರದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಮಕ್ಕಳು ಕೂಡಾ ಭಾಗಿಯಾಗಿ ಮೀನುಗಳ ರಾಶಿಯ ನಡುವೆ ಓಡಾಡಿ ಆಟವಾಡುತ್ತಾ ಸಂಭ್ರಮಿಸಿದರು. ಕೆಲವರು ಸಂಗ್ರಹಿಸಿದ ಮೀನುಗಳ ಪೈಕಿ ಕೆಲವನ್ನು ಮನೆ ಬಳಕೆಗಾಗಿ ಇಟ್ಟುಕೊಂಡರೆ, ಉಳಿದವನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತೆಗೆದುಕೊಂಡು ಹೋದರು. ಕುತೂಹಲ ಮೂಡಿಸಿದ ಘಟನೆಗಳು: ಕಳೆದ ಕೆಲವು ದಿನಗಳ ಹಿಂದೆ ಅಂಕೋಲಾ ತಾಲೂಕಿನ ಹಾರವಾಡ ಗಾಬೀತವಾಡ ಪ್ರದೇಶದಲ್ಲಿಯೂ ಇಂಥದೇ ಘಟನೆ ಸಂಭವಿಸಿತ್ತು. ಗ್ರಾಮಸ್ಥರು ಅಲೆಗಳೊಂದಿಗೆ ಬಂದ ಮೀನುಗಳನ್ನು ಸಂಗ್ರಹಿಸಿ ಸಂತಸಪಟ್ಟಿದ್ದರು. ಈ ವರ್ಷ ಆಗಾಗ್ಗೆ ಸಂಭವಿಸುತ್ತಿರುವ ಇಂತಹ ವಿದ್ಯಮಾನಗಳು ಸ್ಥಳೀಯರಲ್ಲಿ ಸಂತಸ ಮೂಡಿಸಿದ್ದು, ಸಮುದ್ರದ ವಾತಾವರಣದಲ್ಲಿನ ಬದಲಾವಣೆಗಳು ಅಥವಾ ಹವಾಮಾನ ವೈಪರೀತ್ಯದಿಂದ ಹೀಗಾಗುತ್ತಿರಬಹುದೇ ಎಂಬ ಚರ್ಚೆಗೂ ಕಾರಣವಾಗಿದೆ.ಇದನ್ನೂ ಓದಿ: ಶರಾವತಿ ಕಣಿವೆಯಲ್ಲಿ ವಿದ್ಯುತ್ ಪಂಪ್ಡ್ ಸ್ಟೋರೇಜ್ ಯೋಜನೆ; ಜನ ಆತಂಕ ಪಡಬೇಕಾಗಿಲ್ಲ ಎಂದು ಅಧಿಕಾರಿಗಳ ಸ್ಪಷ್ಟನೆ
Be the first to comment