ಮೈಸೂರು: ಆಹಾರ ಅರಸಿ ಕಾಡಿನಿಂದ ಹೊರಬಂದ ಕಾಡಾನೆಗಳು, ಅರಣ್ಯ ಇಲಾಖೆ ಜೀಪ್ ಅನ್ನು ಜಖಂಗೊಳಿಸಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸರಗೂರು ತಾಲೂಕಿನಲ್ಲಿ ನಡೆದಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ತಾಲೂಕಿನ ನುಗು ವನ್ಯಜೀವಿ ವಲಯದ ಕಾಡಿನಿಂದ ಹೊರಬಂದ ಕಾಡಾನೆಗಳು ನುಗು ಜಲಾಶಯದ ಮೀನು ಮರಿ ಉತ್ಪಾದನಾ ಕೇಂದ್ರದ ಮೂಲಕ ಮತ್ತೆ ಕಾಡಿಗೆ ಓಡಿಸುವಾಗ ಕಾಡಾನೆಗಳಿಗೆ ಅಡ್ಡಲಾಗಿ ಬಂದ ಇಲಾಖೆ ವಾಹನಕ್ಕೆ ಬಲವಾಗಿ ಗುದ್ದಿದೆ. ಅದೃಷ್ಟವಶಾತ್ ವಾಹನದ ಬಲಬದಿ ಸ್ವಲ್ಪ ಜಖಂಗೊಂಡಿದೆ. ಆದರೆ, ವಾಹನ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನುಗು ಅರಣ್ಯದಿಂದ ಹೊರಬಂದ ಕಾಡಾನೆಗಳು ಮೀನುಮರಿ ಉತ್ಪಾದನಾ ಕೇಂದ್ರದ ಮೂಲಕ ಹಲಸೂರು ಜಮೀನುಗಳಿಗೆ ನುಗ್ಗಿ ಬೆಳೆ ತಿಂದು ನಾಶಗೊಳಿಸುವುದು ಮಾಮೂಲಿ. ಇದೇ ಮಾದರಿಯಲ್ಲಿಯೇ ನಾಶಗೊಳಿಸಿ, ಜಲಾಶಯ ಹಾದು ಹಳೇಹೆಗ್ಗುಡಿಲು ಗ್ರಾಮದ ಹತ್ತಿರವಿರುವ ಕಾಡಿನಲ್ಲಿ ಇರುತ್ತಿದ್ದವು. ಇದನ್ನು ನಿಯಂತ್ರಿಸಲು ಮುಂದಾದಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ರೈತರ ಮನವಿ: ಈ ಭಾಗದಲ್ಲಿ ಕಾಡಿನಿಂದ ಹೊರಬಂದ ಕಾಡಾನೆಗಳು ಪ್ರತಿದಿನ ಜಲಾಶಯದಲ್ಲಿ ಈಜಿಕೊಂಡು ಹೋಗುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಯಾವುದೇ ಕ್ರಮ ವಹಿಸುತ್ತಿಲ್ಲ. ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ವಹಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.ಇದನ್ನೂ ಓದಿ: ಕಾಕನಕೋಟೆ ಅರಣ್ಯದಲ್ಲಿ ಕಾಡಾನೆಗಳ ಹಿಂಡು ಕಣ್ತುಂಬಿಕೊಂಡ ಸಫಾರಿಗರು: ವಿಡಿಯೋ
Comments