ಧಾರವಾಡ: ಇರಾನ್ - ಇಸ್ರೇಲ್ ಯುದ್ಧದ ಪರಿಣಾಮವಾಗಿ ಎಲ್ಲೆಡೆ ಗ್ಯಾಸ್ ಅಭಾವ ಎದುರಾಗಿದ್ದು, ಇದರ ಎಫೆಕ್ಟ್ ಇದೀಗ ರಾಮನವಮಿಗೂ ತಟ್ಟಿದೆ. ಧಾರವಾಡದ ಕೆಲಗೇರಿ ಬಳಿ ಇರುವ ಸಾಯಿಬಾಬಾ ಮಂದಿರದ ಪ್ರಸಾದವನ್ನು ಸೌದೆ ಒಲೆ ಮೇಲೆ ಮಾಡಲಾಯಿತು.ರಾಮನವಮಿ ಮುನ್ನದಿನವಾದ ಗುರುವಾರ ಸಾಯಿಬಾಬಾ ಮಂದಿರದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕಮರ್ಷಿಯಲ್ ಸಿಲಿಂಡರ್ ಕೊರತೆಯಿಂದ ಬಂದಿರುವ ಭಕ್ತರಿಗೆ ಸಮಸ್ಯೆಯಾಗದಂತೆ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಪ್ರಸಾದದ ವ್ಯವಸ್ಥೆ ಮಾಡಲಾಯಿತು.ಪ್ರಸಾದ ವ್ಯವಸ್ಥೆಗೆ ಇಲ್ಲಿ ಸುಮಾರು 10-12 ಕಮರ್ಷಿಯಲ್ ಸಿಲಿಂಡರ್ ಬೇಕಾಗುತ್ತದೆ. ಆದರೆ, ಒಂದೇ ಒಂದು ಸಿಲಿಂಡರ್ ಕೊಡುತ್ತೇವೆ ಎಂದು ಗ್ಯಾಸ್ ವಿತರಕರು ಹೇಳಿದ್ದರಿಂದ 15 ಸಾವಿರ ಭಕ್ತರಿಗೆ ಸೌದೆ ಒಲೆಯಲ್ಲೇ ಅಡುಗೆ ತಯಾರಿಸಲಾಯಿತು. ಅನ್ನ, ಪಲಾವ್, ಸಾಂಬಾರ್, ಪಲ್ಯ ಸೇರಿದಂತೆ ಇತರ ಪದಾರ್ಥಗಳನ್ನು ದೇವಸ್ಥಾನದ ಕಮಿಟಿಯಿಂದ ಒಲೆಯಲ್ಲೇ ತಯಾರಿಸಿ ಪ್ರಸಾದ ವಿತರಿಸಲಾಯಿತು. ನಾಳೆ ಎಲ್ಲೆಡೆ ರಾಮನವಮಿಯನ್ನು ಆಚರಿಸಲಾಗುತ್ತದೆ. ಇಂದು ಗುರುವಾರ, ಹಾಗಾಗಿ ಇಲ್ಲಿನ ಸಾಯಿಬಾಬಾ ಮಂದಿರದಲ್ಲಿ ದೇವಸ್ಥಾನದ ಕಮಿಟಿ ಇಂದೇ ರಾಮನವಮಿಯನ್ನು ಆಚರಿಸಿತು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಸೌದೆ ಒಲೆಯ ಮೇಲೆ ಮಾಡಲಾಗುತ್ತಿದೆ. ಕಮರ್ಷಿಯಲ್ ಸಿಲಿಂಡರ್ ಸಿಕ್ಕಿಲ್ಲ. ಹೀಗಾಗಿ ಸೌದೆ ಒಲೆ ಮೊರೆ ಹೋಗಿದ್ದೇವೆ. ಇದರಿಂದ ನಮಗೆ ಅನುಕೂಲವಾಗಿದೆ. ಕಮರ್ಷಿಯಲ್ ಸಿಲಿಂಡರ್ಗೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗಿತ್ತು. ಕಟ್ಟಿಗೆಯಿಂದ ಅಡುಗೆ ಮಾಡಿದ್ದರಿಂದ ಉಳಿತಾಯವಾಗಿದೆ. ಮುಂದಿನ ದಿನಗಳಲ್ಲಿ ಸಹ ಸೌದೆ ಒಲೆಯ ಮೇಲೆಯೇ ಅಡುಗೆ ಮಾಡುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಹೇಶ ಶೆಟ್ಟಿ ತಿಳಿಸಿದರು.ಇದನ್ನೂ ಓದಿ: ಉಡುಪಿ: ಗ್ಯಾಸ್ ಕೊರತೆಯಿಂದ ಹೊಟೇಲ್ಗಳು ಬಂದ್; ಮೀನು ವ್ಯಾಪಾರಕ್ಕೆ ಬಿತ್ತು ಹೊಡೆತ
Comments