ವಿಜಯನಗರ: ವಿಶ್ವಪ್ರಸಿದ್ಧ ವಿರೂಪಾಕ್ಷೇಶ್ವರ ದೇವಸ್ಥಾನದ ಆನೆ ಲಕ್ಷ್ಮಿಯನ್ನು ಚಿಕಿತ್ಸೆಗಾಗಿ ಬುಧವಾರ ನಸುಕಿನ ವೇಳೆ ಕೋಲಾರಕ್ಕೆ ಕಳುಹಿಸಲಾಯಿತು. ಹಲವು ವರ್ಷಗಳಿಂದ ದೇವಸ್ಥಾನದ ಆಕರ್ಷಣೆಯಾಗಿದ್ದ ಲಕ್ಷ್ಮಿಯನ್ನು ಭಕ್ತರು, ಅರ್ಚಕರು ಹಾಗೂ ಸ್ಥಳೀಯರು ಭಾವುಕವಾಗಿ ಬೀಳ್ಕೊಟ್ಟರು.ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲಕ್ಷ್ಮಿಗೆ ತಜ್ಞ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ವಾಹನದ ಮೂಲಕ ಕೋಲಾರದ ಆರೈಕೆ ಕೇಂದ್ರಕ್ಕೆ ರವಾನಿಸಲಾಯಿತು. ಈ ವೇಳೆ ದೇವಸ್ಥಾನ ಆವರಣದಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು.ಲಕ್ಷ್ಮಿಯನ್ನು ನೋಡಲು ನಸುಕಿನಲ್ಲೇ ಆಗಮಿಸಿದ್ದ ಭಕ್ತರು ಹಣ್ಣು, ಬಾಳೆಹಣ್ಣು ನೀಡಿ ಪೂಜೆ ಸಲ್ಲಿಸಿದರು. ಕೆಲವರು ಕಣ್ಣೀರಿಟ್ಟು ಲಕ್ಷ್ಮಿಯನ್ನು ಬೀಳ್ಕೊಟ್ಟ ದೃಶ್ಯ ಮನಕಲುಕುವಂತಿತ್ತು. ದೇವಸ್ಥಾನದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ಕಳುಹಿಸುವ ವ್ಯವಸ್ಥೆ ಮಾಡಿದರು.ಹಂಪಿಗೆ ಆಗಮಿಸುವ ಪ್ರವಾಸಿಗರ ಗಮನ ಸೆಳೆಯುತ್ತಿದ್ದ ಲಕ್ಷ್ಮಿ, ದೇವಸ್ಥಾನದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಪ್ರಮುಖ ಪಾತ್ರವಹಿಸಿತ್ತು. ಚಿಕಿತ್ಸೆ ಪಡೆದು ಶೀಘ್ರದಲ್ಲೇ ಲಕ್ಷ್ಮಿ ಮತ್ತೆ ಹಂಪಿಗೆ ಮರಳಲಿ ಎಂದು ಭಕ್ತರು ಪ್ರಾರ್ಥಿಸಿದರು.ಇದನ್ನೂ ಓದಿ: ಹಂಪಿಯಲ್ಲಿರುವ ಆನೆ ಲಕ್ಷ್ಮೀ ಸ್ಥಳಾಂತರಕ್ಕೆ ವಿರೋಧ: ದೇವಸ್ಥಾನದ ಎದುರು ಸಾರ್ವಜನಿಕರ ಆಕ್ರೋಶ
Comments