ಬೆಂಗಳೂರು: ಕಳೆದ ವಾರದಿಂದ ಆನೇಕಲ್ ಸುತ್ತಮುತ್ತ ಆನೆಗಳ ಹಿಂಡು ಬೀಡುಬಿಟ್ಟಿದೆ. ಇಂದು ಪಟ್ಟಣದ ದೊಡ್ಡಕೆರೆಯ ಎಸ್ಟೀಪಿ ಪ್ಲಾಂಟ್ ಬಳಿ ಮೂರು ಆನೆಗಳು ಪೊದೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.ಭಾನುವಾರ ಮಧ್ಯರಾತ್ರಿ ಪಟ್ಟಣದ ಕಾಲೋನಿಯ ಕಡೆಗೆ ಧಾವಿಸಿದ್ದ ಮೂರಾನೆಗಳು ಬೆಳಗ್ಗೆ ಆಗುವಷ್ಟರಲ್ಲಿ ಬನ್ನೇರುಘಟ್ಟ ಕಾಡಿಗೆ ಮರಳಿದರೆ ಇನ್ನುಳಿದ ಮೂರು ಆನೆಗಳು ದೊಡ್ಡ ಕೆರೆಯಲ್ಲಿ ಆಶ್ರಯ ಪಡೆದಿವೆ. ಒಟ್ಟು ಆರು ಆನೆಗಳ ಹಿಂಡು ಆನೇಕಲ್ನತ್ತ ಮುಖಮಾಡಿದೆ. ಕಳೆದ ಶನಿವಾರದ ರಾತ್ರಿ ಆನೇಕಲ್ ಕರಗ ನಡೆಯುತ್ತಿದ್ದ ಸಂದರ್ಭದಲ್ಲಿ ಧರ್ಮರಾಯಸ್ವಾಮಿ ದೇವಾಲಯದ ಕೂಗಳತೆಯಲ್ಲಿ ಆನೆಗಳು ಕಂಡಿದ್ದವು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪಟ್ಟಣದತ್ತ ಹೆಜ್ಜೆ ಹಾಕದಂತೆ ಪಟಾಕಿ ಸಿಡಿಸಿ ಕಾಡಿನತ್ತ ಓಡಿಸಲು ಹರಸಾಹಸ ಪಟ್ಟಾರಾದರೂ ಎರಡು ಗುಂಪುಗಳಾಗಿ ಬೇರ್ಪಡಿಸಿದರು. ನೇರವಾಗಿ ಸುಣವಾರ, ಆನೇಕಲ್ ಕಾಲೋನಿಗೆ ನುಗ್ಗಿದ ಆನೆಗಳು ಅರಣ್ಯ ಸಿಬ್ಬಂದಿ ಹಾಗು ನಿವಾಸಿಗಳ ಅಬ್ಬರಕ್ಕೆ ಊರು ಬಿಟ್ಟು ಕೆರೆಗೆ ಇಳಿದಿವೆ. ಸಂಜೆ ಆಗುವವರೆಗೂ ಜನರ ಉಪಟಳದಿಂದ ಕಾಡಿನತ್ತ ಆನೆಗಳ ಡ್ರೈವ್ಗಾಗಿ ಸಂಜೆ ಆಗುವವರೆಗೂ ಕಾಯಬೇಕಾದ ಸ್ಥಿತಿ ಅರಣ್ಯ ಹಾಗೂ ಆನೇಕಲ್ ಸಿಬ್ಬಂದಿಯ ಪಾಲಾಗಿದೆ. ಇನ್ನು ಸಾರ್ವಜನಿಕರು ತಮ್ಮಲ್ಲಿನ ಮೊಬೈಲ್ ಹಿಡಿದು ತಾ ಮುಂದು ನಾ ಮುಂದು ಎಂದು ಆನೆಗಳತ್ತ ಮುಗಿಬೀಳುತ್ತಿದ್ದು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಕೇವಲ ಬೆರಳೆಣಿಕೆಯಷ್ಟೇ ಸಿಬ್ಬಂದಿಯನ್ನು ಆನೆ ಕಾವಲಿಗೆ ಕಳಿಸಿರುವುದನ್ನು ನಾಗರೀಕರು ಶಪಿಸುವಂತೆ ಮಾಡಿವೆ. ಸಂಜೆಯ ತಂಪು ಆವರಿಸುವವರೆಗೂ ಆನೆಗಳನ್ನು ಓಡಿಸುವುದು ಕಷ್ಟಸಾಧ್ಯವಾದ್ದರಿಂದ ಜನರ ಹಾವಳಿ ತಡೆಯುವುದು ಅರಣ್ಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.ಇದನ್ನೂ ಓದಿ: ಬೊಮ್ಮೇನಹಳ್ಳಿಯಲ್ಲಿ 28 ಕಾಡಾನೆಗಳ ಹಿಂಡು: ರಾತ್ರಿ ಸಂಚಾರಕ್ಕೆ ಅರಣ್ಯ ಇಲಾಖೆ ಬ್ರೇಕ್
Comments