ಮೈಸೂರು: ತಾಯಿಯೊಂದಿಗೆ ಹುಲಿ ಮರಿಗಳು ಚಿನ್ನಾಟ ಆಡುತ್ತಿರುವ ದೃಶ್ಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗರಿಗೆ ಮುದ ನೀಡಿದೆ.ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಮೂಲಕ ಸಫಾರಿಗೆ ಹೋದ ಸಫಾರಿಗರಿಗೆ ಹುಲಿ ಮರಿಗಳು ತಾಯಿಯೊಂದಿಗೆ ಮುದ್ದಾಡುತ್ತಿರುವ ಅಪರೂಪದ ದೃಶ್ಯ ಕಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾಡು ತಂಪಾಗಿದೆ. ತಾಯಿಯೊಂದಿಗೆ ರಸ್ತೆಗಿಳಿದು ಮಣ್ಣಿನ ಘಮಲಿಗೆ ಮಾರುಹೋದ ಮರಿಗಳು ಮಣ್ಣಿನ ಪರಿಮಳ ಆಘ್ರಾಣಿಸುತ್ತಾ, ಆಟವಾಡಿವೆ. ಸಫಾರಿ ವೇಳೆ ಪ್ರವಾಸಿಗರ ಕ್ಯಾಮರಾದಲ್ಲಿ ಈ ಮನಮೋಹಕ ದೃಶ್ಯ ಸೆರೆಯಾಗಿದೆ. ತಾಯಿ ಹುಲಿ, ಮರಿಗಳ ತುಂಟಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಚಿರತೆ ದಾಳಿಗೆ ಕರು ಬಲಿ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ನಂಜನಗೂಡು ತಾಲೂಕಿನ ಹನುಮನಪುರ ಗ್ರಾಮದಲ್ಲಿ ನಡೆದಿದೆ.ಹನುಮನಪುರ ಗ್ರಾಮದ ರೈತ ರವೀಶ್ ಎಂಬುವರು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರುವಿನ ಮೇಲೆ ಬೆಳಗಿನ ಜಾವ ಚಿರತೆ ದಾಳಿ ಮಾಡಿದೆ. ಕರುವಿನ ಮೇಲೆ ದಾಳಿ ಮಾಡಿದ ಚಿರತೆ 2 ವರ್ಷದ ಕರುವನ್ನು ಎಳೆದಾಡಿ ಅರೆಬರೆ ತಿಂದು ಬಿಸಾಡಿ ಹೋಗಿದೆ. ಮುಂಜಾನೆ ಸಮಯದಲ್ಲಿ ರೈತ ರವೀಂದ್ರ ಹಾಲು ಕರೆಯಲು ಬಂದ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಹನುಮನಪುರ, ಕೋಣನೂರು, ಚುಂಚನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಗ್ರಾಮಸ್ಥರು ಜಮೀನುಗಳಿಗೆ ತೆರಳಲು ಭಯಭೀತರಾಗಿದ್ದಾರೆ. ಕೂಡಲೇ ಚಿರತೆಯನ್ನು ಸೆರೆಹಿಡಿದು ನಷ್ಟ ಅನುಭವಿಸಿದ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹನುಮನಪುರ ಗ್ರಾಮಸ್ಥರು ಒತ್ತಾಯಿಸಿದರು. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಸೆರೆ ಹಿಡಿಯಲು ಬೋನ್ ಇಡಲಾಗುವುದು ಮತ್ತು ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.ಇದನ್ನೂ ನೋಡಿ: ಮಂಗನ ಬೇಟೆಗೆ ಎತ್ತರದ ಮರದಿಂದ ಹಾರಿದ ಕರಿ ಚಿರತೆ: ಪ್ರವಾಸಿಗರ ಮೊಬೈಲ್ನಲ್ಲಿ ರೋಚಕ ದೃಶ್ಯ ಸೆರೆ
Comments