ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ದಡದಹಳ್ಳಿ ಹಾಡಿಗೆ ನುಗ್ಗಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರೊಂದಿಗೆ ಹಿಮ್ಮೆಟ್ಟಿಸಿದ ಘಟನೆ ಬುಧವಾರ ನಡೆಯಿತು. ಕಬಿನಿ ಹಿನ್ನೀರಿನ ಪ್ರದೇಶದ ವ್ಯಾಪ್ತಿಗೆ ಹೊಂದಿಕೊಂಡಂತೆ ಇರುವ ಮೊಳೆಯೂರು ಅರಣ್ಯ ಪ್ರದೇಶದಿಂದ ಹಂಚೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಡದಹಳ್ಳಿ ಹಾಡಿಗೆ ಈ ಕಾಡಾನೆ ನುಗ್ಗಿ ಬಂದಿತ್ತು. ಕಾಡಾನೆಯನ್ನು ಕಂಡು ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಆನೆಯನ್ನು ಕಾಡಿನೊಳಗೆ ಹಿಮ್ಮೆಟ್ಟಿಸಿದ್ದಾರೆ. ಈ ಮೂಲಕ ಗ್ರಾಮಸ್ಥರ ಆತಂಕವನ್ನು ದೂರು ಮಾಡಿದ್ದಾರೆ. ಆದರೆ, ಗ್ರಾಮದ ಸುತ್ತಮುತ್ತ ಆಗಾಗ್ಗೆ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕಾಡುಪ್ರಾಣಿಗಳು ಕಾಡಿನಿಂದ ಬರದಂತೆ ತಡೆಯಬೇಕೆಂದು ಅರಣ್ಯ ಇಲಾಖೆಗೆ ಹಂಚೀಪುರ ಗ್ರಾಮಸ್ಥರು ಒತ್ತಾಯಿಸಿದರು. ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಹೆಡಿಯಾಲ ಎಸಿಎಫ್ ಡಿ.ಪರಮೇಶ್, "ಕಾಡಾನೆ ನಿಯಂತ್ರಣ ತಪ್ಪಿ ಹಾಡಿಗೆ ಬಂದಿದೆ. ಗ್ರಾಮಸ್ಥರು ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಸಿಬ್ಬಂದಿ ಭೇಟಿ ನೀಡಿದ್ದಲ್ಲದೇ ಗ್ರಾಮಸ್ಥರ ಸಹಕಾರದೊಂದಿಗೆ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸಿದ್ದಾರೆ" ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಶಾಲಾ ವಾಹನ ಅಟ್ಟಿಸಿಕೊಂಡು ಬಂದ ಒಂಟಿ ಸಲಗ: ವಿಡಿಯೋ - WILD ELEPHANT CHASED SCHOOL BUS
Comments