ಹಾವೇರಿ : ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ ಪುರಾತನ ಕಾಲದ ನಂದಿ ಮೂರ್ತಿ ಪತ್ತೆಯಾದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ.ಗ್ರಾಮದ ಬಳಿ ಇರುವ ಬಾಳೆ ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ ನಂದಿ ಮೂರ್ತಿ ಪತ್ತೆಯಾಗಿದೆ. ಇದು 3 ಅಡಿ ಎತ್ತರವಿದೆ. ಮೂರ್ತಿ ಸಿಗುತ್ತಿದ್ದಂತೆ ಗ್ರಾಮಸ್ಥರು ಶುಚಿಗೊಳಿಸಿದ್ದಾರೆ. ನಂತರ ಮೂರ್ತಿಗೆ ಗ್ರಾಮದ ಜನರು ಪೂಜೆ ಸಲ್ಲಿಸಿದ್ದಾರೆ. ಗ್ರಾಮದ ದೇವಸ್ಥಾನದ ಬಳಿ ನಂದಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲು ನಿರ್ಧಾರ ಮಾಡಿರುವುದಾಗಿ ಗ್ರಾಮದ ಜನರು ತಿಳಿಸಿದ್ದಾರೆ. ಪರಮೇಶ್ವರನ ವಾಹನ ನಂದಿ ಸಿಕ್ಕಿರುವುದಕ್ಕೆ ಗ್ರಾಮಸ್ಥರು ಜಯಕಾರ ಹಾಕಿದ್ದಾರೆ. ನಮ್ಮ ಗ್ರಾಮಕ್ಕೆ ನಂದಿಯ ಮೂರ್ತಿ ಸಿಕ್ಕಿರುವುದು ಗ್ರಾಮಕ್ಕೆ ಶುಭಕರವಾಗಲಿದೆ. ಈ ಮೂರ್ತಿ ಯಾವ ಕಾಲದ್ದು? ಕೆರೆಯಲ್ಲಿ ಹೇಗೆ ಪತ್ತೆಯಾಯಿತು ಎನ್ನುವುದರ ಬಗ್ಗೆ ಇತಿಹಾಸ ಸಂಶೋಧಕರು ಶೋಧನೆ ಮಾಡಲಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಆದಿಮಾನವರ ಸಮಾಧಿ ಪತ್ತೆ : ಇತ್ತೀಚಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬಸಲಿಕಟ್ಟಿ ತಾಂಡಾದ ಬಳಿ 3,200 ವರ್ಷಗಳ ಹಿಂದಿನ ಆದಿಮಾನವರ ಸಮಾಧಿ ಪತ್ತೆಯಾಗಿತ್ತು. ಇತಿಹಾಸ ಸಂಶೋಧಕ ಪ್ರಮೋದ್ ನಲವಾಗಲು ಎಂಬುವರು ಸ್ಥಳ ಗುರುತಿಸಿ ಪತ್ತೆ ಮಾಡಿದ್ದರು. ಈ ಸಮಾಧಿ ಮಹಾಶಿಲಾಯುಗ ಸಂಸ್ಕೃತಿಗೆ ಸೇರಿದ್ದಾಗಿದ್ದು, ಸ್ಥಳದಲ್ಲಿ ಕಂಡುಬಂದ ಕಲ್ಲಿನ ರಚನೆಗಳು ಆ ಭಾಗದಲ್ಲಿ ಪ್ರಾಚೀನ ಮಾನವರು ವಾಸಿಸುತ್ತಿದ್ದರೆಂಬುದನ್ನು ಸೂಚಿಸುತ್ತವೆ ಎಂದು ಅವರು ತಿಳಿಸಿದ್ದರು. ಇದನ್ನೂ ಓದಿ : 3,200 ವರ್ಷಗಳ ಹಿಂದಿನ ಆದಿಮಾನವರ ಸಮಾಧಿ ಪತ್ತೆ! ಫೋಟೋಗಳಲ್ಲಿ ನೋಡಿ
Comments