ಚಾಮರಾಜನಗರ: ರಾಜ್ಯದ ಪ್ರಸಿದ್ದ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, 33 ದಿನಗಳ ಅವಧಿಯಲ್ಲಿ 3.13 ಕೋಟಿ ರೂ. ಸಂಗ್ರಹವಾಗಿದೆ.ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಣೆ ಮೂಲಕ ಹುಂಡಿ ಎಣಿಕೆ ವಿವರ ನೀಡಿದೆ. ಬೆಟ್ಟದ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಎಣಿಕೆ ನಡೆಯಿತು. ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು, ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ನಡೆಸಲಾಯಿತು.ಬೇಸಿಗೆ ರಜೆ, ಅಮಾವಾಸ್ಯೆ ಹಿನ್ನೆಲೆಯಲ್ಲಿ, ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು. ಭಕ್ತರು ಕಾಣಿಕೆ ರೂಪದಲ್ಲಿ 3,13,12,118 ರೂ. ನಗದು, 64 ಗ್ರಾಂ ಚಿನ್ನ ಹಾಗೂ 2 ಕೆಜಿ 50 ಗ್ರಾಂ ಬೆಳ್ಳಿ ವಸ್ತುಗಳನ್ನು ಹುಂಡಿಗೆ ಹಾಕಿದ್ದಾರೆ. ಅಲ್ಲದೆ, ಇ-ಹುಂಡಿಯಿಂದ 6,88,214 ರೂ., ಚಲಾವಣೆಯಲ್ಲಿ ಇಲ್ಲದ 2000 ರೂ. ಮುಖಬೆಲೆಯ 3 ನೋಟುಗಳು ಹಾಗೂ ನಾಲ್ಕು ವಿದೇಶಿ ನೋಟುಗಳನ್ನು ದೇವರಿಗೆ ಅರ್ಪಿಸಲಾಗಿದೆ.ಕಳೆದ ಹಲವು ವರ್ಷಗಳಿಂದ ಮಲೆ ಮಹದೇಶ್ವರನ ಆದಾಯ ಏರುಗತಿಯಲ್ಲಿದ್ದು, ಶಕ್ತಿ ಯೋಜನೆಯ ಪರಿಣಾಮ ಮಹಿಳಾ ಭಕ್ತಸಾಗರವೇ ದೇವಾಲಯಕ್ಕೆ ಆಗಮಿಸುತ್ತಿರುವುದರಿಂದ ಭರಪೂರ ಆದಾಯ ಹರಿದು ಬರುತ್ತಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 106 ಜೊತೆ ವಧು-ವರರು
Comments