ಕೊರ್ಬಾ(ಛತ್ತೀಸ್ಗಢ): ದೇವ್ಪಹಾರಿ ಜಲಪಾತ ನೋಡಲು ಹೋಗಿ ನದಿ ಮಧ್ಯೆ ಸಿಲುಕಿಕೊಂಡಿದ್ದ ಮೂವರು ಯುವಕರನ್ನು ಪೊಲೀಸ್ ಹಾಗೂ ರಕ್ಷಣಾ ತಂಡ ರಕ್ಷಿಸಿದೆ. ಮಳೆಗಾಲದಲ್ಲಿ ಕಣ್ಮನ ಸೆಳೆಯುವ ಸೌಂದರ್ಯಕ್ಕೆ ಹೆಸರುವಾಸಿಯಾದ ದೇವ್ಪಹಾರಿ ಜಲಪಾತಕ್ಕೆ ಪ್ರತಿ ವರ್ಷ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸೋಮವಾರ ಸಂಜೆ, ಮೂವರು ಯುವಕರು ಜಲಪಾತಕ್ಕೆ ಭೇಟಿ ನೀಡಿ ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ಕುಳಿತು ಜಲಪಾತದ ದೃಶ್ಯವನ್ನು ಆನಂದಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ, ನದಿಯ ಪ್ರವಾಹ ತೀವ್ರಗೊಂಡು ಯುವಕರು ಬಂಡೆಯ ಮೇಲೆ ಸಿಲುಕಿಕೊಂಡಿದ್ದರು. ತಕ್ಷಣ ತಮ್ಮ ಕುಟುಂಬ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.ಆದರೂ ರಾತ್ರಿಯಿಡೀ ಮೂವರು ಅಲ್ಲಿಯೇ ಸಿಲುಕಿಕೊಂಡಿದ್ದರು. ಮಂಗಳವಾರ ಬೆಳಗ್ಗೆ ಅವರನ್ನು ರಕ್ಷಿಸಲಾಯಿತು. 15 ಗಂಟೆಗಳ ಬಳಿಕ, ಎಸ್ಡಿಆರ್ಎಫ್ ತಂಡ ಅವರನ್ನು ಸುರಕ್ಷಿತವಾಗಿ ಕರೆತಂದಿದೆ.ನದಿಯ ಮಧ್ಯ ಸಿಲುಕಿಕೊಂಡ ಸ್ನೇಹಿತರು: ಘನಶ್ಯಾಮ್ ಮಹಾಂತ್, ಹಿಮೇಶ್ ಸಾರಥಿ ಮತ್ತು ಧನೇಶ್ವರ ಸಾರಥಿ ದೇವ್ಪಹರಿಗೆ ಪಿಕ್ನಿಕ್ಗಾಗಿ ಹೋಗಿದ್ದರು. ಅವರೆಲ್ಲರೂ ಲೆಮ್ರು ಬಳಿಯ ಶ್ಯಾಮ್ಗ್ ಮತ್ತು ಗುರ್ಮಾ ಗ್ರಾಮಗಳ ನಿವಾಸಿಗಳು. ದೋಣಿ ಮತ್ತು ಹಗ್ಗ ಬಳಸಿ ರಕ್ಷಣೆ: ಮಾಹಿತಿ ಪಡೆದ ತಕ್ಷಣ ನಮ್ಮ ತಂಡ ಸಂಜೆ ಸ್ಥಳಕ್ಕೆ ತಲುಪಿದೆ. SDRF ತಂಡಕ್ಕೂ ಸಹ ಮಾಹಿತಿ ನೀಡಲಾಯಿತು. ರಕ್ಷಣಾ ತಂಡ ಆ ರಾತ್ರಿಯೇ ಕಾರ್ಯಾಚರಣೆ ಆರಂಭಿಸಲು ತಯಾರಾಗಿತ್ತು. ಆದರೆ ನೀರಿನ ಹರಿವು ತುಂಬಾ ಪ್ರಬಲವಾಗಿತ್ತು. ಮತ್ತು ಕತ್ತಲೆಯಿಂದಾಗಿ ಕಾರ್ಯಾಚರಣೆ ನಿಲ್ಲಿಸಬೇಕಾಯಿತು ಎಂದು ಲೆಮ್ರು ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಲೋಕನಾಥ್ ಯಾದವ್ ತಿಳಿಸಿದ್ದಾರೆ.ತಂಡ ಯುವಕರಿಗೆ ರಾತ್ರಿಯಿಡೀ ಗುಮ್ಮಟದ ರಚನೆಯೊಳಗೆ ಇರಲು ಸೂಚಿಸಿತು. ಮರುದಿನ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಬೆಳಿಗ್ಗೆ 9 ರಿಂದ 10 ರ ನಡುವೆ, ಟೆಥರಿಂಗ್ ಹಗ್ಗ ಬಳಸಿ ದೋಣಿಯ ಮೂಲಕ ಅವರನ್ನು ನದಿಯಿಂದ ಹೊರತರಲಾಯಿತು ಎಂದರು.ಇದನ್ನೂ ನೋಡಿ: ಕಬಿನಿ ಹೊರಹರಿವಿನಿಂದ ಜಲಪಾತಗಳಿಗೆ ಜೀವಕಳೆ: ಮೆಟ್ಟೂರು ತಲುಪಿದ ಕಾವೇರಿ
Comments