ಬರ್ಗಢ(ಒಡಿಶಾ): ಹಲ್ಲೆಗೆ ಒಳಗಾಗಿ, ಸಾವನ್ನಪ್ಪಿದ್ದನೆಂದು ಬಾವಿಗೆ ಎಸೆಯಲ್ಪಟ್ಟ ವ್ಯಕ್ತಿಯನ್ನು 4 ದಿನಗಳ ಬಳಿಕ ಜೀವಂತವಾಗಿ ರಕ್ಷಿಸಿದ ಘಟನೆ ಬರ್ಗಢ ಜಿಲ್ಲೆಯಲ್ಲಿ ನಡೆದಿದೆ. ಈ ವ್ಯಕ್ತಿಯನ್ನು ರಕ್ಷಣೆ ಮಾಡಿದ 24 ಗಂಟೆಯ ಒಳಗಾಗಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ಬಾವಿಯಿಂದ ರಕ್ಷಿಸಲ್ಪಟ್ಟ ವ್ಯಕ್ತಿಯ ಹೇಳಿಕೆಯ ಪ್ರಕಾರ, ಈತ ಪದ್ಮಾಪುರ ಪೂರೇನಾ ಗ್ರಾಮದ ತುಳಸಿ ರಾಮ್ ಭೂಯೆ. ಅವರು ವೃತ್ತಿಯಲ್ಲಿ ಕಾರ್ಮಿಕರಾಗಿದ್ದಾರೆ. ಬಂಧಿತ ಆರೋಪಿಗಳು ಪದ್ಮಾಪುರ ಶಕ್ತಿನಗರ ಪಾದಾದ ಬಬ್ಲು ಮನಾಹಿರಾ, ಬಿಜೆಪುರ ಭೋಯಿಪಾದಾದ ಶಕ್ತಿ ಬೆಹೆರಾ, ಬಿಜೆಪುರ ಮಧ್ಯಪದಾದ ತ್ರಿನಾಥ್ ಮೊಹಾಪಾತ್ರ ಮತ್ತು ಬಿಜೆಪುರದ ಮೊಹಮ್ಮದ್ ಅಕ್ಮಲ್ ಸಿವಾಕ್. ಪೊಲೀಸರು ಬಿಜೆಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಹೆಸರಿನಲ್ಲಿ ಪ್ರಕರಣ ಸಂಖ್ಯೆ 138ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಳೆದ ಭಾನುವಾರ, ಪದ್ಮಾಪುರ ಪೂರೇನಾ ಗ್ರಾಮದ ತುಳಸಿ ರಾಮ್ ಭೂಯೆ ಮೊಬೈಲ್ ಫೋನ್ ಖರೀದಿಸಲು ತನ್ನ ಸ್ನೇಹಿತರೊಂದಿಗೆ 5000 ರೂ.ಗಳೊಂದಿಗೆ ಮನೆಯಿಂದ ತೆರಳಿದ್ದ. ಅವರು ತಮ್ಮ ನಾಲ್ವರು ಸ್ನೇಹಿತರೊಂದಿಗೆ ಬಿಜೆಪುರ ಬಳಿಯ ಸಮಲೈಪದರ್ ಗ್ರಾಮಕ್ಕೆ ಬಂದಿದ್ದರು. ಅಲ್ಲಿ ಮದ್ಯ ಸೇವಿಸಿದ ನಂತರ, ತುಳಸಿ ರಾಮ್ ಹಾಗೂ ಸ್ನೇಹಿತರೊಂದಿಗೆ ಜಗಳವಾಗಿತ್ತು. ಈ ವೇಳೆ ಸ್ನೇಹಿತರು ಆತನ ಮೇಲೆ ಹಲ್ಲೆ ನಡೆಸಿದರು. ತೀವ್ರವಾಗಿ ಹೊಡೆದ ನಂತರ ತುಳಸಿ ರಾಮ್ ಪ್ರಜ್ಞೆ ತಪ್ಪಿದ್ದರು, ಮತ್ತು ಆತ ಸಾವನ್ನಪ್ಪಿದ್ದಾನೆಂದು ಭಾವಿಸಿ ದೊಡ್ಡ ಬಾವಿಗೆ ಎಸೆದಿದ್ದರು. ಮನೆಗೆ ಹಿಂತಿರುಗಿ ಬಾರದ ಕಾರಣ ತುಳಸಿ ರಾಮ್ ಅವರ ಕುಟುಂಬವು ಅವರ ನಾಪತ್ತೆಯ ಬಗ್ಗೆ ಪದ್ಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಬಾವಿಯಲ್ಲಿ ಸ್ವಲ್ಪ ನೀರು ಇದ್ದ ಕಾರಣ ಆತ ಬದುಕುಳಿದಿದ್ದಾನೆ. ಆದರೆ ನಾಲ್ಕು ಭಯಾನಕ ದಿನಗಳನ್ನು ಬಾವಿಯಲ್ಲಿ ಕಳೆದಿದ್ದಾನೆ. ಸಹಾಯಕ್ಕಾಗಿ ಕಿರುಚಿದ್ದಾನೆ. ಆದರೆ ಯಾರಿಗೂ ಆತನ ಕೂಗು ಕೇಳಿಸಿರಲಿಲ್ಲ. ನಾಲ್ಕು ದಿನಗಳ ನಂತರ, ಸ್ಥಳೀಯ ನಿವಾಸಿ ಬಿಹಾರಿ ಮಲಿಕ್ ಎಂಬ ವೃದ್ಧ ಮರ ಕಡಿಯುತ್ತಿದ್ದಾಗ ತುಳಸಿ ರಾಮನ ಕಿರುಚಾಟ ಕೇಳಿಸಿಕೊಂಡಿದ್ದರು.ಅವರು ಬಾವಿ ಬಳಿ ಹೋದಾಗ ತುಳಸಿ ರಾಮ್ ನೋವಿನಿಂದ ನರಳುತ್ತಿರುವುದನ್ನು ಕಂಡರು. ತಕ್ಷಣ ಸ್ಥಳೀಯ ನಿವಾಸಿಗಳು ಮತ್ತು ನಂತರ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಯಿತು. ಹಾಗೇ ಬಿಜೆಪುರ ಪೊಲೀಸರೂ ಸ್ಥಳಕ್ಕೆ ತಲುಪಿ ಆತನನ್ನು ಸುರಕ್ಷಿತವಾಗಿ ರಕ್ಷಿಸಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ತುಳಸಿ ರಾಮ್ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ, ಪೊಲೀಸರು 24 ಗಂಟೆಗಳ ಒಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ತಿಳಿಸಿದರು. ಇದನ್ನೂ ಓದಿ: ಹೆಂಡತಿ ಕೊಲೆಗೆ ಸುಪಾರಿ ನೀಡಿ, ಅಪರಿಚಿತರ ದುಷ್ಕೃತ್ಯ ಎಂದು ಬಿಂಬಿಸಲು ಮುಂದಾದ ಪತಿ ಬಂಧನ: ಸುಳಿವು ನೀಡಿದ ತರಕಾರಿ ಚೀಲ!
Comments