ಹಾವೇರಿ: ಜಿಲ್ಲೆಯಲ್ಲಿ ಮಳೆರಾಯನ ಅವಕೃಪೆ ಮುಂದುವರೆದಿದ್ದು, ಒಣಗುತ್ತಿರುವ ಬೆಳೆಗಳನ್ನು ಕೆಲವು ರೈತರು ನಾಶ ಮಾಡುತ್ತಿದ್ದಾರೆ. ಬ್ಯಾಡಗಿ ತಾಲೂಕಿನ ಹಳೇ ಶಿಡೇನೂರು ಗ್ರಾಮದ ರೈತನೊಬ್ಬ 11 ಎಕರೆ ಜಮೀನಿನಲ್ಲಿದ್ದ ಗೋವಿನಜೋಳದ ಬೆಳೆಯನ್ನು ನಾಶಪಡಿಸಿದರು. ಕಿರಣ ಗಡಿಗೋಳ ಎಂಬ ರೈತ ಅರ್ಧಂಬರ್ಧ ಬೆಳೆದಿದ್ದ ಬೆಳೆ ನಾಶಪಡಿಸಿದ್ದಾರೆ. ಟ್ರ್ಯಾಕ್ಟರ್ನಿಂದ ರೂಟರ್ ಹೊಡೆದು ಬೆಳೆನಾಶ ಮಾಡಿದರು. ಇವರು ಎಕರೆಗೆ ಬಿತ್ತನೆ ಬೀಜ, ಗೊಬ್ಬರ ಎಂದು 25 ಸಾವಿರ ರೂಪಾಯಿ ಖರ್ಚು ಮಾಡಿದ್ದರಂತೆ. ಅಲ್ಲದೆ ಹಣ ಕೊಟ್ಟು ಬೇರೆಯವರ ಜಮೀನು ಲಾವಣಿ ಹಾಕಿಸಿಕೊಂಡಿದ್ದರಂತೆ. ಸುಮಾರು 2 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಬಿತ್ತನೆ ಮಾಡಿದ್ದು, ಇದೀಗ ಬಿತ್ತಿದ ನಂತರ ಸರಿಯಾಗಿ ಮಳೆಯಾಗದೆ ಮೆಕ್ಕೆಜೋಳ ಒಣಗಿ ಹೋಗಿದೆ ಎಂಬುದು ಅವರ ಬೇಸರ.ಇದೀಗ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡುವಂತೆ ರೈತ ಆಗ್ರಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾವೇರಿ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಇದನ್ನೂ ನೋಡಿ: ಮಳೆ ಕೊರತೆ: ನೆಲಕಚ್ಚಿತು 700 ಎಕರೆಯಲ್ಲಿನ ಮೆಕ್ಕೆಜೋಳದ ಪೈರು, ವರುಣನಿಗಾಗಿ ಕಾದುಕುಳಿತ ಅನ್ನದಾತರು!
Comments